ಮಂಗಳವಾರ, ನವೆಂಬರ್ 8, 2011

ನ್ಯಾನೋ ಕಥೆಗಳು -ಭಾಗ 2


ತಪ್ಪೊಪ್ಪಿಗೆ

"ನನ್ನ ಆಹ್ವಾನವನ್ನು ಮನ್ನಿಸಿ ಬಂದಿದ್ದಕ್ಕೆ ಧನ್ಯವಾದ. ನಾಳೆ ನನ್ನನ್ನು ನೇಣಿಗೇರಿಸುತ್ತಾರೆ. ಸಾಯುವ ಮುನ್ನ ನಿಮ್ಮ ಬಳಿ ಹೇಳುವ ವಿಷಯವೊಂದಿತ್ತು."
"ಕೇಳುತ್ತಿದ್ದೇನೆ" ಎಂಬಂತೆ ಅವನು ತಲೆಯಾಡಿಸಿದ.
"ನಿಮ್ಮ ಹೆಂಡತಿಯನ್ನು ನಾನು ಕೊಲೆ ಮಾಡಲಿಲ್ಲ. ಸಾಯಲಿರುವ ಮನುಷ್ಯ ಸುಳ್ಳಾಡಬೇಕಿಲ್ಲ. ಆದರೆ ನಿಮ್ಮ ದ್ವೇಷದ ಹೊರೆ ಹೊತ್ತು ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನಿಮ್ಮನ್ನು ಕರೆಸಿದೆ. ನಿಜವಾಗಿಯೂ ನಾನು ನಿಮ್ಮ ಪತ್ನಿಯನ್ನು ಕೊಂದಿಲ್ಲ. ನನ್ನನ್ನು ನಂಬಿ."
ಕ್ರೌರ್ಯ ಮಡುಗಟ್ಟಿದ ಮುಖಭಾವದೊಡನೆ ಅವನೆಂದ, "ಅದು ನಿನಗಷ್ಟೇ ಅಲ್ಲ, ನನಗೂ ಗೊತ್ತು."
ಮಂದಸ್ಮಿತನಾಗಿ, ಬೆರಳಲ್ಲಿ ಕಾರಿನ ಕೀಲಿ ತಿರುವುತಾ,್ತ ಗೋಡೆಯಾಚೆ ಕಾದಿದ್ದ ತನ್ನ ಪ್ರೇಯಸಿಯತ್ತ ಬಿರಬಿರನೆ ನಡೆದ.
-----
ತಿಳಿವು - ಅಳಿಕೆ

"ಕೆಳಗೆ ಭೋರ್ಗರೆವ ನದಿ, ಮೇಲೆ ಈ ಅದ್ಭುತ ಸೇತುವೆ. ಮದುವೆಯ ಐವತ್ತನೇ ವಾರ್ಷಿಕೋತ್ಸವದ ಸಮಾರಂಭಕ್ಕೆ ಇಂತಹ ಸ್ಥಳದ ಆಲೋಚನೆ ಬಂದದ್ದಾದರೂ ಹೇಗೆ?"
"ನಮ್ಮ ಬಾಳಸೇತು, ಸ್ನೇಹಸೇತುಗಳಿಗೆ ಸಾಂಕೇತಿಕ ಸ್ಥಳ!"
ಅಜ್ಜ, ಅಜ್ಜಿ ಇಬ್ಬರೂ ಉಲ್ಲಾಸದಿಂದ ಓಡಾಡುತ್ತಿದ್ದರು.
ಅಕಸ್ಮಾತ್ತಾಗಿ ಅಜ್ಜಿ ಸೇತುವೆಯಂಚಿನಿಂದ ಆಯ ತಪ್ಪಿ ನೀರಲ್ಲಿ ಬಿದ್ದರು.
ವೈಕುಂಠ ಸಮಾರಾಧನೆ.
"ಅಷ್ಟು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದವರು ಉಳಿಯುವುದು ಕಷ್ಟ ಎಂಬುದು ಅವರಿಗೆ ತಿಳಿದಿರಬೇಕಿತ್ತು"
ಅಜ್ಜನಿಗೂ ಅದರ ಅರಿವಿತ್ತು.
ಅಜ್ಜ ಮತ್ತು ಅಜ್ಜಿಯ ಭಾವಚಿತ್ರಗಳಿಗೆ ಹಾಕಿದ್ದ ಮಲ್ಲಿಗೆಯ ಹಾರಗಳು ಅವರಂತೆಯೇ ನಗುತ್ತಿದ್ದವು.
---------
ಅದ್ವಿತೀಯ

"ಎಷ್ಟು?"
"ಅರವತ್ತು ಲಕ್ಷ"
ಅವನು ಮರು ಮಾತಾಡದೆ ಹಣದ ಚೀಲವನ್ನಿತ್ತ.
ಕರಾರುವಾಕ್ ಮೊತ್ತ.
"ಈ ಪುರಾತನ ಅತ್ಯಮೂಲ್ಯ ಹೂದಾನಿ ಈಗ ನಿಮ್ಮದು. ಕೇವಲ 2 ಹೂದಾನಿಗಳು ಮಾತ್ರ ಈ ಪ್ರಪಂಚದಲ್ಲಿವೆ. ಜೋಪಾನವಾಗಿ ಒಯ್ಯಿರಿ."
ಅವನು ಮಾತಾಡಲಿಲ್ಲ.
ಆ ಹೂದಾನಿಯನ್ನು ಕೈಗೆತ್ತಿಕೊಂಡು ನೆಲಕ್ಕೆ ಒಗೆದ.
ಸಾವಿರ ಚೂರಾಯಿತು ಆ ಅರವತ್ತು ಲಕ್ಷ!
"ಇಂತಹ ಅದ್ಭುತ ಪ್ರಪಂಚದಲ್ಲಿ ಒಂದು ಮಾತ್ರ ಇರಬೇಕು"
ಅಲ್ಲಿಂದ ಹೊರಟುಹೋದ.
ಅವಾಕ್ಕಾಗಿ ನೋಡುತ್ತಿದ್ದವರು ನಿಂತೇ ಇದ್ದರು.
----
ನಿಗದಿ

ನಿರ್ಜನ ಪ್ರದೇಶದಲ್ಲೊಬ್ಬ ಭವಿಷ್ಯ ಹೇಳುವ ಜ್ಯೋತಿಷಿ.
ಬಹಳ ಪ್ರಸಿದ್ಧ.
ಬಂದವನ ಕೈ ನೋಡುತ್ತಾ ನುಡಿದ.
"ತುಂಬಾ ಕೆಟ್ಟ ಗ್ರಹಗತಿ. ಕೇತು ಶಾಂತಿಯಾಗಬೇಕು. ಐವತ್ತು ಸಾವಿರ ಆಗುತ್ತೆ. ಬೇಗ ಮಾಡಿಸಿ"
ಕೈ ಹಿಂದೆಗೆಯದೆ ಅವನೆಂದ.
"ಪಿಂಡ ಇಡಲು ಎಷ್ಟು?"
"ಎರಡು ಸಾವಿರ" ಅಪ್ರಯತ್ನವಾಗಿ ಬಂತು ಜ್ಯೋತಿಷಿಯ ಬಾಯಿಂದ.
ಢಂ ..... ಢಂ
ಸಾವಿರದ ಎರಡು ನೋಟುಗಳು ಜ್ಯೋತಿಷಿಯ ಹೆಣದ ಮೇಲೆ ಬಿದ್ದಿದ್ದವು.
                                                                                                             ನ್ಯಾನೋ ಮಾಲೀಕರು
                                                                                                                   ಡಾ.  ಕಿರಣ್

-----

ಭಾನುವಾರ, ಅಕ್ಟೋಬರ್ 30, 2011

ನ್ಯಾನೋ (Nano) ಕಥೆಗಳು



ಮೊದಲ ಮಾತು: ಈ ಯಾವ ಕತೆಗಳೂ ನನ್ನ ಸ್ವಂತದ್ದಲ್ಲ. ನೆನಪಿನಂಗಳದಲ್ಲಿ ಬೆಚ್ಚನೆ ಕೂತಿದ್ದ ಇವುಗಳನ್ನು ಮಿತ್ರ ದಯಾನಂದರ ಒತ್ತಾಸೆಯ ಮೇರೆಗೆ ಅಕ್ಷರಗಳಿಗಿಳಿಸಿದ್ದೇನೆ. ಮೆಚ್ಚಿಗೆಯಾದರೆ ಅದರ ಕೀರ್ತಿ ಅನಾಮಿಕ ಮೂಲ ಕತೆಗಾರರಿಗೆ. ಇಷ್ಟವಾಗದಿದ್ದಲ್ಲಿ ಅದು ಸಣ್ಣ ಕತೆಯೊಂದನ್ನೂ ನೆಟ್ಟಗೆ ಬರೆಯಲು ಬಾರದ ನನ್ನ ಮಹಾನ್ ಸಾಮರ್ಥ್ಯಕ್ಕೆ!
--------

ಸತ್ಯದರ್ಶನ

ಅವನ ಅಲೆದಾಟ ಕೊನೆಗೂ ಮುಗಿಯಿತು.
ಬೆಂಕಿಯ ಬದಿಯಲ್ಲಿ "ನಿಜ" ಕುಳಿತಿದ್ದಳು.
ಮಹಾ ಕುರೂಪಿ ಮುದುಕಿ.
"ನಿಜ" ಎಂದರೆ ನೀನೇನೋ?' ಅವ ಕೇಳಿದ.
ಹೌದೆಂದು ಗೋಣು ಆಡಿಸಿದಳು ಮುದುಕಿ.
"ಈ ಪ್ರಪಂಚಕ್ಕೆ ನಿನ್ನ ಯಾವ ಸಂದೇಶವನ್ನು ನಾನು ಹರಡಬೇಕೆನ್ನುವೆ?' ಪ್ರಶ್ನಿಸಿದನಾತ.
ಬೆಂಕಿಯೊಳಗೆ ಉಗಿದು ಆಕೆಯಂದಳು, "ಎಲ್ಲರಿಗೂ ಹೇಳು: 'ನಿಜ' ಏರು ಜವ್ವನದ ಅದ್ಭುತ ಲಾವಣ್ಯದ ಮಹಾ ಸುಂದರಿ ಎಂದು!"
----------

ಮೂಲ

ಸತತ ಐದು ವರ್ಷಗಳ ನಷ್ಟ.
"ವೇಲಾಯುಧ"ವನ್ನು ಇನ್ನೂ ಮುಂದುವರಿಸುವುದು ಹುಚ್ಚಿನ ಮಾತು.
ಕಾರ್ಖಾನೆ ಕಛೇರಿಯ ಪ್ರತಿಯೊಂದು ಕಾಗದವನ್ನೂ ಅವನು ಪರೀಕ್ಷಿಸಿದ್ದ.
ನಷ್ಟದ ಕಾರಣ ತಿಳಿಯಲಿಲ್ಲ.
ಸಾಲಿಗರು ಕತ್ತಿನ ಮೇಲೆ ಕೂತಿದ್ದರು.
ಒಂದೇ ದಾರಿ.
ಕಪಾಟಿನಿಂದ ಕೈಬಂದೂಕನ್ನು ತೆಗೆದು ಹಣೆಯ ಮೇಲಿಟ್ಟುಕೊಂಡ.
"ಟಕ್" ಎಂದು ಕುದುರೆ ಒತ್ತಿದ ಸದ್ದು.
ಸತ್ಯದರ್ಶನವಾಯಿತು.
"ನಮ್ಮ ಕೈಬಂದೂಕು ತಯಾರಿಕಾ ಘಟಕಕ್ಕೆ ಹೋಗಬೇಕು, ನಡೆ".
ತನ್ನ ಕಾರ್ಯದರ್ಶಿಯೊಡನೆ ಬಿರಬಿರನೆ ನಡೆದು ಹೊರಟ.
----------

ನೀ ನನಗೆ; ನಾ ನಿನಗೆ...

ಆಕೆಯ ಅಡುಗೆ ಅಮೃತ.
ಆತನೋ ಮಹಾನ್ ರಾಸಾಯನ ಶಾಸ್ತ್ರಙ್ಞ.
ಅವನ ನೆಚ್ಚಿನ ಅಡುಗೆ ತಯಾರಿಸಿದ್ದಳಾಕೆ.
ಬಹಳ ನಾಜೂಕಾಗಿ ಅವನು ಹಣ್ಣಿನ ರಸ ಬೆರೆಸಿದ್ದ.
"ಊಟಕ್ಕೆ ಬನ್ನಿ" ಆಮಂತ್ರಿಸಿದಳಾಕೆ.
ಹಣ್ಣಿನ ರಸ ತುಂಬಿದ ಗಾಜಿನ ಲೋಟಗಳೊಂದಿಗೆ ಬಂದನಾತ.
"ನಮ್ಮಿಬ್ಬರ ಪ್ರೀತಿಗಾಗಿ" ಎಂದರು ಇಬ್ಬರೂ ಒಟ್ಟಿಗೆ.
ನಕ್ಕರು.
ಅವನು ಊಟ ಬಾಯಿಗಿಟ್ಟ. ಅವಳು ಹಣ್ಣಿನ ರಸ ತುಟಿಗೆ ಸೋಕಿಸಿದಳು.
"ಕಾರ್ಕೋಟಕ ವಿಷ; ನಿಮಿಷ ಮಾತ್ರ!"
ಅವರಿಬ್ಬರ ಮನದ ಕಡೆಯ ಸ್ವಗತ.
------

ಆವರ್ತನ

"ಅಯ್ಯೋ"
"ಏನಾಯಿತು?"
"ಈ 'ಟೈಮ್ ಮೆಶೀನ್' ಗುಂಡಿಯನ್ನು ಒತ್ತಿಬಿಟ್ಟೆ. ಸಮಯ ಹಿಂದಕ್ಕೆ ಹೋಗುತ್ತಿದೆ"
"ತಕ್ಷಣ ಆ 'ಹಿಂದಿರುಗು' ಗುಂಡಿಯನ್ನು ಒತ್ತು"
"ಒತ್ತಲಾಗುತ್ತಿಲ್ಲ. ಕಚ್ಚಿಕೊಂಡಿದೆ"
"ನನ್ನ ಪ್ರಯತ್ನ ಫಲಿಸಿತು. ಆದರೆ ಒಂದು ನಿಮಿಷ ಹಿಂದಕ್ಕೆ ಹೋಗಲೇ ಬೇಕಾಗುತ್ತದೆ. ಗತ್ಯಂತರವಿಲ್ಲ"
"ಅಯ್ಯೋ"
"ಏನಾಯಿತು?"
"ಈ 'ಟೈಮ್ ಮೆಶೀನ್' ಗುಂಡಿಯನ್ನು ಒತ್ತಿಬಿಟ್ಟೆ. ಸಮಯ ಹಿಂದಕ್ಕೆ ಹೋಗುತ್ತಿದೆ"......
.......
----

ಬಹುಮಾನ

"ನನ್ನ ಇನ್ನೂ ಪ್ರೀತಿ ಇದೆಯಾ ನಿನಗೆ?" ಪತ್ನಿ ಕೇಳಿದಳು.
"ಬೆಟ್ಟದಷ್ಟು" ಎಂದನಾತ.
"ಪುರಾವೆ ನೀಡು"
"ಆಯಿತು. ಇನ್ನು ಮುಂದೆ ಮಂಚದ ಮೇಲೆ ನಿನ್ನ ಮುಟ್ಟುವುದಿಲ್ಲ!"
"ಅದೆಂಥಾ ಪುರಾವೆ?"
"ನನ್ನ ಮುಖ್ಯ ಬಯಕೆಯನ್ನು ಬಿಟ್ಟುಕೊಡುತ್ತಿದ್ದೀನಲ್ಲವಾ?"
ಅವಳು ಪ್ರಸನ್ನಳಾದಳು. ಆದರೂ "ನೋಡೋಣ" ಎಂದು ಕತ್ತು ಕೊಂಕಿಸಿದಳು.
ಆ ರಾತ್ರಿ ಅವನು ಅವಳನ್ನು ಮುಟ್ಟಲಿಲ್ಲ.
ಆವಳ ಪ್ರೀತಿ ತುಂಬಿ ಬಂತು.
ಅವನನ್ನು ಗಾಢವಾಗಿ ಚುಂಬಿಸಿದಳು.
ಅವರಿಬ್ಬರೂ ರಾತ್ರಿಯಿಡೀ ಪ್ರೀತಿ ಮಾಡಿದರು.
"ಅದನ್ನು ಮಾಡುವುದಿಲ್ಲವೆಂದಿದ್ದೆ!" ಎಂದು ಮತ್ತೆ ಕತ್ತು ಕೊಂಕಿಸಿದಳು ಮುಂಜಾನೆ.
"ಅದಾ", ಅವನೆಂದ. "ಅದು ನನ್ನ ಪ್ರೀತಿಯ ಪುರಾವೆಗೆ ನನಗೆ ದಕ್ಕಿದ ಬಹುಮಾನ!"

                                                                                         ನ್ಯಾನೋ ಮಾಲೀಕರು (ಲೇಖಕರು)
                                                                                                     ಡಾ.ಕಿರಣ್ V S
                                                                                                     ನಾರಾಯಣ ಹೃದಯಾಲಯ
                                                                                                     ಬೆಂಗಳೂರು 

ಶನಿವಾರ, ಸೆಪ್ಟೆಂಬರ್ 17, 2011

ಸಮಾಧಿ ಮಾಡು

ಪ್ರಶ್ನೆ:ಕಂಪ್ಯೂಟರ್ನಲ್ಲಿ CD burn ಮಾಡಲಿಕ್ಕೆ ಆಗದಿದ್ದರೆ ಏನು ಮಾಡುವುದು?
ಉತ್ತರ:ನಮ್ಮ ಕಡೇ ಸತ್ತವರನ್ನು ಸುಡುತ್ತಾರೆ ಇಲ್ಲದಿದ್ದರೆ ಹೂಳುತ್ತಾರೆ.ಹಾಗೆ  CDನ burn ಮಾಡಲಿಕ್ಕೆ ಆಗದಿದ್ದರೆ ಹೂತಿಡಿ.

ಗಣಕಯಂತ್ರ


ಪ್ರಶ್ನೆ :ನಮ್ಮ computer ಪದೇ ಪದೇ hang ಆಗುತ್ತೆ .ಏಕೆ ?
ಉತ್ತರ:ಆತ್ಮಹತ್ಯೆ ಮಹಾ ಪಾಪ ಅಂತ ಅದಕ್ಕೆ ಗೊತ್ತಿಲ್ಲ .ಅದಕ್ಕೆ.

ಎರಡು ದೋಣಿಗಳ ಪಯಣ

ಪ್ರಶ್ನೆ  : ಎರಡು ದೋಣಿಗಳ ಮೇಲೆ ಕಾಲಿಟ್ಟು ಜೀವನದಲ್ಲಿ ಪ್ರಯಾಣ ಮಾಡಬಾರದು. ಏಕೆ?
ಉತ್ತರ:ಪ್ಯಾಂಟು ಹರಿದೋಗುತ್ತೆ. ಅದಕ್ಕೆ .
                                                                                  ಕೃಪೆ -Dr ಕಿರಣ್