ಮಂಗಳವಾರ, ಜುಲೈ 31, 2012

ಸತ್ಯಮೇವ ಜಯತೆ (ಕಾದಂಬರಿ )-2

"ಯ್ಯಾಕೋ ಇನ್ನೂ ಮಲ್ಗಿದ್ದಿ?"
                                                              ನಮ್ಮೂರಲ್ಲಿ.. 



' ''

"ಏಳು ಆಗ್ಲೇ ಎಂಟು ಗಂಟೆ ಆಯ್ತು"


'' ''



"ಯ್ಯಾಕೆ ಅವನ್ನ ಎಬ್ಸ್ತೀರಿ, ಮಲಗಲಿ ಬಿಡಿ, ಹೇಗೂ ಕಾಲೇಜ್ ಮುಗಿದಿದೆ ಅಲ್ವಾ"

"ಅಲ್ವೇ, ನೆನ್ನೆ ಪೇಪರ್ ನೋಡಿದ್ಯೋ ಇಲ್ವೋ"

"ಏನಿತ್ತು ಅಂತದ್ದು, ನೆನ್ನೆ ಪೇಪರಿನಲ್ಲಿ"

"ಇವತ್ತು PUC ಪರಿಕ್ಷೇದು ರಿಸಲ್ಟ್ ಕಣೇ, ಹೋಗಿ ಕಾಲೇಜ್ನಲ್ಲಿ ನೋಡಿ ಬರೋದಲ್ವ.
ಪರೀಕ್ಷೇ ಬರೆದೋರೆಲ್ಲಾ ನಿದ್ರೆ ಇಲ್ದೆ ರಾತ್ರಿಯಿಡಿ ಹೊರಾಳಾಡಿದ್ರೆ,ನಿನ್ನ ಮಗ ಇನ್ನೂ ಮಲ್ಗಿದಾನೆ ನೋಡು"

"ಅವನಿಗೆ ಮೈ ಸ್ವಲ್ಪ ಬೆಚ್ಚಗಿದೆ, ನಾಳೆ ನೋಡಿ ಬಂದ್ರಾತು"

"ಹಾಗೆನು, ಸ್ವಲ್ಪ ಕಾಫಿ ಕಾಯ್ಸಿ ಕೊಡು, ಜ್ವರ ಇಳಿಲಿಲ್ಲ ಅಂತಂದ್ರೆ ಡಾಗುಟ್ರುಗೆ ತೋರ್ಸಾಣ"

"ಕಾಫಿಪುಡಿ ಮುಗಿದು ಹೋಗಿದೆ, ಹೋಗಿ ರಾಮಣ್ಣನ ಅಂಗಡಿಲಿ ತಕ್ಕೊಂಡ್ ಬನ್ನಿ"

"ಅವನೆಲ್ಲಿ ಈಗ ಬಾಗ್ಲು ತೆಗೀತಾನೆ, ಅವನ ಅಂಗಡಿ ಎನಿದ್ರೂ ೧೦ ಗಂಟೆ ಮೇಲೆ"

"ಯಾಕೆ ಮೊದಲೆಲ್ಲ ೬ ಗಂಟೆಗೆಲ್ಲ ತೆಗೀತಿದ್ನಲ್ಲ?"

"ನಮ್ಮೂರಿಗೆ ಕಕ್ಕಸ್ಸು ಮನೆಗಳು ಬಂದಾದ ಮೇಲೆ ಜನಗಳೂ ಸೋಮಾರಿಗಳಾಗಿಬಿಟ್ಟಿದ್ದಾರೆ"

"ಸುಮ್ನೆ ಏನೇನೋ ಹುಚ್ಚು ಹಿಡಿದಿರೋತರ ಮಾತನಾಡಬೇಡಿ"

"ಇರೋದನ್ನೆ ನಾನು ಹೇಳಿದ್ದು"

"ಕಕ್ಕಸ್ಸು ಮನೆಗಳಿಗೂ, ಅಂಗಡಿ ಬಾಗಿಲಿಗೂ ಏನ್ರೀ ಸಂಬಂಧ?"

"ಈ ಇಡೀ ಊರಿಗೆ ಇರೋದೊಂದೆ ಅಂಗಡಿ, ಎಲ್ರೂ ಅಲ್ಲೇ ಹೋಗಿ ಸಾಮಾನು ತಕೊಣ್ದೆ ವಿಧಿ ಇಲ್ಲ
ಅಂತ ಅವನಿಗೂ ಗೊತ್ತು, ಮೊದ್ಲು ಬೆಳಕಾಗೂ ಮುಂಚೆ ಕೆರೆಕಡೆ ಹೋಗಿ, ಏಳು ಗಂಟೆಗೆಲ್ಲ ಬಾಗ್ಲು ತಗೀತಿದ್ದ.

ಈಗ ಮನೇಲೇ ಸರ್ಕಾದೋರು ಕಕಸ್ಸು ಮನೆ ಕಟ್ಟೋಕೆ ಸಹಾಯ ಮಾಡಿದಮೇಲೆ, ಬೆಳಗಾಗೋ ಮುಂಚೆ

ಬಯಲಿಗೆ ಹೋಗೊ ಅವಶ್ಯಕತೆ ಇಲ್ಲ ನೋಡು, ಎಷ್ಟೋತ್ತಿಗಾದರೂ ಎದ್ರು ನಡೆಯುತ್ತೆ ಅಂತ ೧೦ ಗಂಟೆಗೆ
ಬಾಗ್ಲು ತೆಗಿತಾನೆ ನೋಡು"

"ಸರಿ ಬಿಡಿ, ಟೀನೇ ಮಾಡ್ತಿನಿ"



ಟೀ ಕುಡಿದ ಮೇಲೆ, ಸ್ವಲ್ಪ ಆರಾಮು ಏನಿಸತೊಡಗಿತು, ಆದರೊ ಮೈ ಬಿಸಿ ಇಳಿದಿಲ್ಲ, ಇನ್ನೂ ಸ್ವಲ್ಪ ಹೊತ್ತು

ಮಲಗಿರೋಣ ಅನಿಸತೊಡಗಿತು. ಅಬ್ಬ ಎಷ್ಟು ದಿನ ಆದಮೇಲೆ ಈಗೇ ಆರಾಮವಾಗಿ ಮಲಗಿದ್ದೇನೆ.

ಕಳೆದ ಒಂದು-ಎರಡು ವರ್ಷದಿಂದ, ಅಂದರೆ PUC ಗೆ ಬಂದಾಗಿನಿಂದ ಸರಿಯಾಗಿ ನಿದ್ರೆ ಮಾಡಿಲ್ಲ.

ದಿನಾ ಏಳುತಿದ್ದುದು ಬೆಳಿಗ್ಗೆ ೩ ಗಂಟೆಗೆ, ಅಬ್ಬ ಎಷ್ಟು ಸುಖ ಇದೆ, ಜಗತ್ತಿನ ಸುಖ ಎಲ್ಲಾ ೯ ಗಂಟೆ ತನಕ

ಮಲಗಿಕೊಳ್ಳೋದ್ರಲ್ಲೆ ಇದೆ ಅನ್ನಿಸುತ್ತ ಇದೆ. ಇವತ್ತು ದಿನ ಪೂರ್ತಿ ಹೀಗೆ ಮಲಗೋಣ ಅನಿಸ್ತಾ ಇದೆ



"ಅಕ್ಕವ್ರ ಒಂದು ಗುದ್ಲಿ ಇದ್ರೆ ಕೊಡಿ, ಹೊಲಕ್ಕೆ ನೀರ್ ಹಾಯ್ಸಿ ಬರ್ತೀನಿ"

"ಕರಿಯ, ಕಾಲುವೆಯಲಿ ನೀರು ಬಂತೇನು"

"ಇನ್ನೂ ಇಲ್ಲ, ಇವತ್ತು ಬರುತ್ತೆ ಅಂತ ಹೇಳಿದ್ದಾರೆ. ರಾತ್ರಿ ಎಲ್ಲ ಇವತ್ತು ಜಾಗರಣೆ,
ನೀರು ಬರೋತನಕ"

"ಸರಿ ರಾತ್ರಿ ಊಟ ಗದ್ದೆಗೆ ಕಳಿಸ್ತೀನಿ'

"ಅಕ್ಕವ್ರ ಮಗಾವ್ರು ರಿಸಲ್ಟ್ ಭಯಕ್ಕೆ ಜ್ವರ ಬಂದು ಮಲಗ್ಬಿಟ್ಟಿದ್ದಾರೆ. ನನ್ನ ಮಗಾನು
PUC ಫೇಲ್ ಆಗಿದ್ ದಿನ ನಾಲ್ಕು ದಿನ ಪತ್ತೇನೆ ಇರಲಿಲ್ಲ ನೋಡಿ"

ಎದ್ದು ಕರಿಯನ ಮುಖಕ್ಕೆ ನಾಲ್ಕು ಬಾರಿಸೋಣ ಅನಿಸ್ತು. ಅವನತ್ರ ಏನ್ ಮಾತು ಅಂತ ಸುಮ್ಮನೆ ಮಲಗ್ದೆ.

"ಸುಮ್ನೆ ನಿನ್ನ ಕೆಲ್ಸ ನೋಡೊ ಕರಿಯ. ನನ್ನ ಮಗ ಗ್ಯಾರಂಟಿ ಪಾಸಾಗುತ್ತಾನೆ ನೋಡು"

"ತಮಾಷೆಗೆ ಹಂಗೆ ಅಂದೆ ನೋಡಿ, ಪಾಸಾದ್ರೆ ಕೋಳಿ ಊಟ ಕಳ್ಸಿ ಗದ್ದೆ ಹತ್ರ"

"ಸರಿ, ಸರಿ ನೀನು ಬೇಗ ಹೊರಡು"

ಕರಿಯನನ್ನು ಕಂಡರೆ ನಂಗೆ ಅಷ್ಟು ಆಗೋದಿಲ್ಲ. ಅವನು ಹೊರಗೆ ಬಹಳ ವಿನಯದಿಂದ ಮಾತನಾಡಿದರೂ,

ಸಮಯ ಸಿಕ್ಕಾಗಲೆಲ್ಲ ಕಾಲು ಎಳೆಯದೆ ಬಿಡೋನಲ್ಲ. ಮೊದಲೆಲ್ಲ ನಮ್ಮ ಮನೇಲಿ ಖಾಯಂ ಆಗಿ ಕೆಲ್ಸ ಮಾಡ್ತಿದ್ದ.

ಮೊದಲು ಅವನಿಗೆ ವರ್ಷಕ್ಕೆ ಇಷ್ಟು ಅಂತ ದುಡ್ಡು ಕೊಡ್ತಿದ್ವಿ, ಹೊಲದ ಕೆಲಸ ಇದ್ದಾಗಲೆಲ್ಲ ಬಂದು ಮಾಡೋನು,

ಹೊಲದ ಕೆಲಸ ಇಲ್ದೇ ಇರೋ ದಿನ ಮನೆ ಕೆಲಸ ಮಾಡ್ತಿದ್ದ.ಈಗ ಅವನನ್ನ ಹಿಡಿಯೋದೆ ಕಷ್ಟ ಅಂತ ಅಪ್ಪ ಹೇಳ್ತಾನೆ.

ದಿನಕ್ಕೆ 20 ರೂಪಾಯಿ ಕೂಲಿ ಮತ್ತು ಊಟ-ತಿಂಡಿ ಕೇಳ್ತಾನಂತೆ.ಅದಲ್ಲದೆ, ನೀರು ಹಾಯ್ಸೋ ರಾತ್ರಿ ಕೆಲಸ ಇದ್ರೆ

ಪಾಕೇಟ್ ಹೆಂಡ ಹೆಚ್ಚಿಗೆ ಕೊಡಬೇಕು, ಇಲ್ಲದಿದ್ರೆ ಕೆಲಸಕ್ಕೆ ಬರೋದಿಲ್ಲ. ಅಷ್ಟು ಕೊಡ್ತೀನಿ ಅಂದ್ರು ಯಾವಾಗಲು

ಬರೋದಿಲ್ಲ. ಜಾಸ್ತಿ ಸಿಗೋ ಕಡೆ ಹೋಗ್ತಾನೆ. ಮೊದಲಿನ ಹಾಗೆ ಅವನನ್ನ ಬಯ್ಯುವ ಹಾಗಿಲ್ಲ,ಏನಾದರು ಇವನ ರೇಗಿದರೆ ,

ಬೇರೆಯವರನ್ನು ಅಂದರೆ ಜೊತೆಗಾರರಿಗೆ ನಮ್ಮ ಮನೆ ಕೆಲಸಕ್ಕೆ ಹೋಗಬೇಡಿ ಅಂತ ಹೇಳಿ ಕೊಡ್ತಾನಂತೆ.

ಏನಂದ್ರೂ ಅನ್ನಿಸ್ಕೊಂಡು ಸುಮ್ಮನಿರಬೇಕು. ಈಗೆಲ್ಲಾ ನಮ್ಮ ಹಳ್ಳಿನಲ್ಲಿ ಹೊಸ ತಲೆಮಾರಿನ ಆಳುಗಳೇ ಸಿಕ್ಕೋದಿಲ್ಲ, ಇವರ
ಮಕ್ಕಳೆಲ್ಲಾ ಬೆಂಗಳೂರು ಸೇರಿಕೊಂಡಿದ್ದಾರೆ. ಯುನಿಫಾರಂ ಹಾಕಿಕೊಂಡು ನೆರಳಲ್ಲಿ ಯಾವುದಾದರೂ ಬಿಲ್ಡಿಂಗು ಕಾಯೋ

ಕೆಲಸ ಸಿಕ್ಕೇ ಸಿಗುತ್ತೆ, ಯಾರಿಗೆ ಬೇಕು ಬಿಸಿಲಲ್ಲಿ ಬೇಯುವ ಹೊಲದ ಕೆಲಸ ಅಂತಾರೆ. ವಿಧಿಯಿಲ್ಲದೆ ಈ ಹಳೆ
ತಲೆಮಾರಿನ ಜನರನ್ನೆ ಹಿಡಿದು ಗದ್ದೆ ಕೆಲಸ ಮಾಡಿಸಬೇಕು ನಮ್ಮಪ್ಪ ..

"ಇನ್ನೂ ವಿಶ್ವನಿಗೆ ಜ್ವರ ಇಳಿದಿಲ್ಲ ಕರಕೊಂಡೋಗಿ ಡಾಕ್ಟ್ರುಗೆ ತೋರಿಸ್ಬಾರ್ದ"

"ಸರಿ, ಹಿಂದೆ ಸೈಕಲ್ ಮೇಲೆ ಬಿಗಿಯಾಗಿ ಕೂತ್ಕೊತಾನ ಕೇಳ್ ನೋಡು"

"ಅವನನ್ನ ಕೂರಿಸೋದೆ ಕಷ್ಟ, ಇನ್ನು ಸೈಕಲಿನಲ್ಲಿ ಹಿಂದೆ ಹೇಗೆ ಕೂತ್ಕೊತಾನೆ"

"ಸರಿ, ಏನು ಮಾಡೋದು"

"ಏನು ಮಾಡೋದು ಅಂದ್ರೆ, ಗಾಡಿ ಕಟ್ಟಿ ಕರಕೊಂಡೋಗಿ"

"ಇವತ್ತು ಸೋಮವಾರ ಅಲ್ವೇನೆ"

"ಸೋಮವಾರ ಆದ್ರೇನು"

"ಬಹಳ ಕಾಲದಿಂದಲೂ, ಸೋಮವಾರ ಎತ್ತನ್ನ ಕೆಲಸಕ್ಕೆ ಹೂಡೋದಿಲ್ಲ, ಹಗಲು ರಾತ್ರಿ ದುಡಿಯೋ
ಎತ್ತಿಗೆ ಒಂದು ದಿನ ಆರಾಮು ಇರ್ಲಿ ಅಂತ ಹಿರಿಯೋರು ಸಂಪ್ರದಾಯ ಮಾಡಿದ್ದಾರೆ.

ನಾವು ಸೋಮವಾರನೂ ಹೀಗೆ ಅವುನ್ನ ಗಾಡಿಗೆ ಕಟ್ಟಿದ್ರೆ ದೇವ್ರು ಮೆಚ್ತಾನ. ಇದೆಲ್ಲ ಗೊತ್ತಿದ್ದೂ ಗಾಡಿ ಕಟ್ಟು

ಅನ್ತಿಯ್ಯಲ್ಲ "

"ನೋಡಿ, ಜ್ವರ ಒಂದುಕ್ಕೆ ಹೋಗಿ, ಇನ್ನೊಂದಕ್ಕೆ ತಿರುಗಿದರೆ ಕಷ್ಟ, ಏನಾದರೂ ಮಾಡಿ"

"ಡಾಕ್ಟ್ರನ್ನ ಇಲ್ಲಿಗೆ ಕರಕೊಂಡು ಬರ್ತೀನಿ"


"ಅವರು ಇಲ್ಲಿಗೆ ಬರ್ತಾರೇನು?"

"ಅವರ ಸ್ಕೂಟರ್ ಪೆಟ್ರೋಲ್ ಚಾರ್ಜ್, ಮನೆಗೆ ಬರೋಕೆ ಹೆಚ್ಚಿಗೆ ದುಡ್ಡು ಕೊಟ್ರೆ
ಬರ್ತಾರೆ. ನಮ್ಮ ಪಟೇಲರು, ಅವರ ತಾಯಿ ಹಾಸಿಗೆ ಹಿಡಿದಿದ್ದಾಗ ಹಾಗೆ ಕರ್ಕೊಂಡು ಬಂದಿದು"

"ಸರಿ ಹೋಗಿ ಬೇಗ ಬನ್ನಿ"

ಅಪ್ಪ ಇವತ್ತು ಹೊಲಕ್ಕೆ ಹೋಗಿಲ್ಲ, ಮನೇಲಿ ಕೂತಿದ್ದಾರೆ. ಮಗನ ಪರೀಕ್ಷೆಯ ಫಲಿತಾಂಶ
ಏನಾಗಬಹುದು ಅಂತ ಒತ್ತಡ ಇರಬಹುದು. ನನಗಂತೂ ಸ್ವಲ್ಪವೂ ಒತ್ತಡ ಇಲ್ಲ, ಗ್ಯಾರಂಟಿ ಪಾಸಾಗುತ್ತೆ.

ಅಮ್ಮನಿಗೆ ಪಾಸಾದರೆ ಅಷ್ಟೇ ಸಾಕು. ೩೫ ರ ಮೇಲೆ ಎಷ್ಟು ಬರುತ್ತೆ ಅಂತ ಅವರಿಗೆ ಕುತೂಹಲ ಇರೋದಿಲ್ಲ.
ನಮ್ಮೂರಿನಲ್ಲಿ PUC ಪಾಸಾಗುವುದೇ ಒಂದು ದೊಡ್ಡ ಸಾಧನೆ. ಬಿಎ ಗಿಯೇ ಮಾಡಿರೋರು
ಹುಡುಕಿದರೂ ೫ ಜನ ಸಿಗಬಹುದು, ನಮ್ಮ ಅಪ್ಪನನ್ನು ಸೇರಿಸಿ.ನಮ್ಮಪ್ಪ ಆಗಿನ ಕಾಲದಲ್ಲೇ ಬಿಎ ಮುಗಿಸಿದ್ರು.

ಎಲ್.ಎಲ್.ಬಿ ಹೋಗಬೇಕು ಅಂತ ಆಸೆ ಇತ್ತಂತೆ, ಆದರೆ ಅವರ ತಂದೆ ತೀರಿಹೋದ ಮೇಲೆ ಊರಿಗೆ ಬಂದು
ವ್ಯವಸಾಯ ಮಾಡ್ತಿದಾರೆ. ಬಿಎ ನಲ್ಲಿ ತುಂಬಾ ಕಡಿಮೆ ನಂಬರ್ ಬಂದಿದ್ದರಿಂದ ಅವರಿಗೆ ಒಳ್ಳೆ ಸಂಬಳದ ಕೆಲಸ

ಸಿಕ್ಕಿಲ್ಲ ಅಂತ ಹೇಳ್ತಾರೆ. ಬೇರೆಯವರ ಕೈ ಕೆಳಗೆ ಗುಮಾಸ್ತರಾಗಿರುವುದಕ್ಕಿಂತ ನಮಗೆ ನಾವು ಆಳಾಗಿರೋದು

ಒಳ್ಳೆದು ಅಂತ, ವ್ಯವಸಾಯ ಮಾಡಿಸುತ್ತಿದ್ದಾರೆ. ನಮ್ಮ ಜಾತಿಗೆ ಹೆಚ್ಚಿಗೆ ಖೋಟಾ ಇದ್ದಿದ್ದರೆ ನಮ್ಮಪ್ಪನಿಗೂ

ಸರ್ಕಾರಿ ನೌಕರಿ ಸಿಗುತ್ತಿತ್ತು ಅಂತ ಅಮ್ಮ ಹೇಳ್ತಾಳೆ.

"ಎಲ್ಲಿ ಡಾಕ್ಟ್ರು"

"ಮನೆ ಹತ್ರ ಬರೋಲ್ಲ ಅಂತ ಅಂದ್ರು"

"ಹೆಚ್ಚಿಗೆ ಕಾಸು ಕೊಟ್ರು ಬರೋದಿಲ್ಲ ಅಂದ್ರೆ"


"ಅವರ ಶಾಪಿನಲ್ಲಿ ತುಂಬಾ ರಷ್, ಅಲ್ಲಿಗೆ ಬಂದು ನೋಡೋ ಹೊತ್ತಿಗೆ ಇಲ್ಲಿ ೨೦ ಜನರನ್ನು
ನೋಡಿ ಕಳಿಸಬಹುದು ಅಂತ ಹೇಳಿದ್ರು, ಅವ್ರು ಹೇಳೋದು ಸರಿ. ನಾವು ಹೆಚ್ಚಿಗೆ ಕೊಡೋ

೨೦ ರೂಪಾಯಿ ಅವರಿಗೆ ಗೀಟೋದಿಲ್ಲ, ಇಲ್ಲಿಗೆ ಗಾಡಿ ಮೇಲೆ ಕರ್ಕೊಂಡು ಬನ್ನಿ ಅಂತ ಹೇಳಿದ್ರು"

"ಅದಕ್ಕೆ ನೀವು ಸೋಮವಾರದ ವಿಷ್ಯ ಹೇಳಿದ್ರೇನು"

"ಹುಂ, ಅದಕ್ಕೆ ಅವ್ರು ನನ್ನನ್ನೆ ಬೈದ್ರು, ನೀವು ನನ್ನ ದನಕ್ಕಿಂತ ಕಡೆಮಾಡಿಬಿಟ್ರಿ.ನಾನು

ಭಾನುವಾರ-ಸೋಮವಾರ, ರಾತ್ರಿ-ಹಗಲು ಅಂತ ನೋಡ್ದೆ ಕೆಲಸ ಮಾಡ್ತಿನಿ, ಇವತ್ತು
ದನಕ್ಕೆ ರಜ ನೀವೇ ಮನೆಗೆ ಬನ್ನಿ ಅಂತ ಹೇಳ್ತಿರಲ್ಲ ಅಂತ ಕೋಪ ಮಾಡಿಕೊಂಡ್ರು".

"ಅದಕ್ಕೆ ನೀವೇನು ಹೇಳಿದ್ರಿ?"

"ತಪ್ಪಾಯ್ತು ಸ್ವಾಮಿ ಅಂತ ಹೇಳ್ದೆ, ಆಯ್ತು ಅಂತ ಒಂದೆರಡು ಗುಳಿಗೆ ಕೊಟ್ಟಿದ್ದಾರೆ.
ಇವತ್ತು ಇದನ್ನು ಕೊಡಿ, ವಾಸಿ ಆಗಲಿಲ್ಲ ಅಂತಂದ್ರೆ ನಾಳೆ ಮಂಗಳವಾರ
ದನಕ್ಕೂ-ಡಾಕ್ಟ್ರುಗು ರಜ ಇಲ್ಲ ಅಂತ ಚುಚ್ಚುದ್ರು, ನನಗೆ ಗುಳಿಗೆ ಕೊಡುವಾಗ"

"ಪತ್ಯೆ ಏನಾದರೂ ಹೇಳಿದರೇನು"

"ಗಂಜಿ ಮಾತ್ರ ಕೊಡಿ ಅಂದ್ರು, ಗುಳಿಗೆನ ಗಂಜಿ ಕೊಟ್ಟ ಮೇಲೆ ಕೊಡಬೇಕಂತೆ, ಖಾಲಿ
ಹೊಟ್ಟೇಲಿ ತಕೋಬಾರ್ದು ಹೊಟ್ಟೆ ಹುರಿ ಬರುತ್ತೆ ಅಂತ ಹೇಳಿದ್ದಾರೆ"

ರವೆ ಗಂಜಿ ನನಗೆ ಆಗಿ ಬರೋದಿಲ್ಲ. ಏನು ವಿಚಿತ್ರ ಜ್ವರ ಬಂದಾಗ ಬೇರೆ ಯಾವ ಊಟದ ರುಚಿನೂ
ಹತ್ತಲ್ಲ, ಊಟ ಮಾಡಬೇಕು ಅಂತನೂ ಅನ್ನಿಸಲ್ಲ.ಇದ್ದುದ್ದರಲ್ಲಿ ಗಂಜಿ ಮಾತ್ರ ಪರವಾಗಿಲ್ಲ ಅನ್ಸುತ್ತೆ.

ಅದೇ ಎಲ್ಲಾ ಸರಿಯಾಗಿದ್ದಾಗ ರವೆ ಗಂಜಿ ಸ್ವಲ್ಪವೂ ರುಚಿಸುವುದಿಲ್ಲ, ಎಲ್ಲ ವಿಚಿತ್ರ !!

ಗುಳಿಗೆ ತೆಗೆದುಕೊಂಡ ಮೇಲೆ ಜ್ವರ ಇಳಿದರೂ, ನಾಲ್ಕು ತಾಸಿನ ನಂತರ ಮತ್ತೇ ಬಂತು.

ಗುಳಿಗೆ ತೆಗೆದುಕೊಂಡರೆ ಮತ್ತೇ ಕಡಿಮೆಯಾಗುತ್ತೆ.ಆಗಲೇ ಊರಿನಲ್ಲೇಲ್ಲಾ PUC ಫಲಿತಾಂಶ ಬಂದಿದೆ.

ಪಟೇಲರ ಮಗನ ಹೊರತು ಮತ್ಯಾರು ಪಾಸಾಗಿಲ್ವಂತೆ. ಇವರೆಲ್ಲಾ ಹೋಗುತ್ತಿದ್ದುದು ಮಂಡ್ಯ ಕಾಲೇಜಿಗೆ, ಅಲ್ಲಿಗೆ ದಿನಾ
ಹೋಗಿ ಬರೋಕೆ ಕಷ್ಟ. ಮಂಡ್ಯಕ್ಕೆ ಹೋಗಬೇಕೆಂದರೆ ಬೆಳಿಗ್ಗೆ ಎದ್ದು ಸೈಕಲ್ಲಿನಲ್ಲಿ ಹೊಳೆತನಕ
ಹೋಗಬೇಕು. ಸೈಕಲ್ಲನ್ನು ಎತ್ತಿಕೊಂಡು ಹೊಳೆ ದಾಟಬೇಕು, ನಂತರ ಒಂದು ಕಿಲೋಮಿಟರ್ ಸೈಕಲ್
ತುಳಿದು, ಮದ್ದೂರಿನ ಬಸ್ ಸ್ಟಾಪ್ ಹತ್ತಿರ ಸೈಕಲ್ ನಿಲ್ಲಿಸಿ ಬಸ್ ಹತ್ತಬೇಕು. ಮತ್ತೇ
ವಾಪಾಸ್ ಕಾಲೇಜ್ ಮುಗಿದ ನಂತರ ಬಸ್ಸು-ಸೈಕಲ್-ಹೊಳೆ-ಸೈಕಲ್ ಪಯಣ. ಹೋಳೆಲಿ ನೀರು ಹೆಚ್ಚಾದರೆ, 6 ಮೈಲು ಬಳಸಬೇಕು

ರಾತ್ರಿ ಬರೋದರ ಒಳಗೆ ಎಲ್ಲಾ ಸುಸ್ತು, ಓದುವುದಕ್ಕೆ ಎಲ್ಲರಿಗೂ ಎಲ್ಲಿ ಸಮಯ ಸಿಕ್ಕುತ್ತೆ,
ಅದಕ್ಕೆ ಓದುವ ಮನಿಸ್ಸಿರುವ ಬುದ್ದಿವಂತ ಹುಡುಗರೂ ಪಾಸಾಗುವುದಿಲ್ಲ ನಮ್ಮೂರಿನಲ್ಲಿ .

ಆದ ಕಾರಣದಿಂದ ನಾನು ಮಂಡ್ಯದ ಕಾಲೇಜಿಗೆ ಸೇರಿ ಕೊಳ್ಳಲಿಲ್ಲ. ಮಂಡ್ಯದಲ್ಲೇ ಹಾಸ್ಟೆಲ್ ನಲ್ಲಿ ಇರಬಹುದಾದರು, ಬಹಳ ದುಬಾರಿ ನಮ್ಮಂತವರಿಗಲ್ಲ. ಅದಕ್ಕೆ ನನ್ನನ್ನ ನಮ್ಮಪ್ಪ "ಭಾರತಿ" ಕಾಲೇಜಿನ ಹಾಸ್ಟೆಲಿನಲ್ಲಿ ಬಿಟ್ಟದ್ದು,
ಅದು ತಾಲೂಕು ಕೇಂದ್ರದಲ್ಲಿ ಇದ್ದುದ್ದರಿಂದ ಹಾಸ್ಟೆಲ್ ನ ಬಾಡಿಗೆ ಕಡಿಮೆ ಇತ್ತು. ಹೊಸ
ಕಾಲೇಜು ಬೇರೆ, ಸೀಟು ಸುಲಭವಾಗಿ ಸಿಕ್ತು. ಈಗ ರಿಸಲ್ಟ್ ನೋಡಬೇಕಾದರೆ, ಹೊಳೆ ದಾಡಿ
ಮದ್ದೂರಿನಿಂದ ಎರಡು ಬಸ್ಸು ಬದಲಿಸಿ ಕಾಲೇಜಿಗೆ ಹೋಗಿ ನೋಡಬೇಕು. ಮಂಡ್ಯದ
ಕಾಲೇಜಿನಲ್ಲಿ ಬೇರೆ ಕಾಲೇಜುಗಳ ರಿಸಲ್ಟ್ ಹಾಕುವುದಿಲ್ಲ. ಎಷ್ಟು ಮಾರ್ಕ್ಸು ಬಂದಿದಿಯೋ
ಏನೋ? ನಮ್ಮ ಕಾಲೇಜಿನಲ್ಲಿ ಓದಿದವರು ಯಾರು ಈ ಊರಿನಲ್ಲಿ ಇಲ್ಲ, ಇಲ್ಲದಿದ್ದರೆ ನಮ್ಮಪ್ಪ ರಿಸಲ್ಟು ನೋಡಲು

ಅವರಿಗೆ ಹೇಳಬಹುದಾಗಿತ್ತು .ರಾತ್ರಿ ಜ್ವರ ಕಮ್ಮಿಯಾಗಲೇ ಇಲ್ಲ. ಮಂಗಳವಾರ ಬೆಳಿಗ್ಗೆ ಎತ್ತಿನಗಾಡಿಯಲ್ಲಿ ಮುಂದಿನ
ಊರಿನಲ್ಲಿರುವ ಡಾಕ್ಟರ್ ಶಾಪಿಗೆ ಕರೆದುಕೊಂಡು ಹೋಗುವುದಾಗಿ ಅಪ್ಪ ಅಮ್ಮನ ಬಳಿ
ಹೇಳುತ್ತಿದ್ದುದು ಕೇಳಿಸುತ್ತಿತ್ತು. ರಾತ್ರಿಯಲ್ಲೂ ಅಪ್ಪನಿಗೆ ರಿಸಲ್ಟ್ ನ ಚಿಂತೆ,
ಅಮ್ಮನಿಗೆ ನನ್ನ ಆರೋಗ್ಯದ ಚಿಂತೆ, ನನಗೆ.......?......

(ಮುಂದುವರೆಯುವುದು )

ಶುಕ್ರವಾರ, ಜುಲೈ 27, 2012

ಸತ್ಯಮೇವ ಜಯತೆ (ಕಾದಂಬರಿ )-1

                                                                          ಮುನ್ನುಡಿ 

ರೋಗಿಗಳ ಸೇವೆಗಾಗಿ  ವೈದ್ಯರಾಗ ಬಯಸುವ ಕಾಲ ಎಂದೂ ಮುಗಿಯಿತು .ಈಗಿನ ವಿದ್ಯಾರ್ಥಿಗಳು ಸಮಾಜ ಸೇವೆಗೊಸ್ಕರ ವೈದ್ಯ ವೃತ್ತಿ ಆರಿಸಿಕೊಳ್ಳು ತಿದ್ದೇವೆ ಎಂದು ಹೇಳಲು  ಒಂದು ಕ್ಷಣ ಯೋಚಿಸುತ್ತಾರೆ .ಅಕಸ್ಮಾತಾಗಿ ಹೇಳಿದರೂ ಕೇಳುಗರು ಸಂಶಯ ಪಡುತ್ತಾರೆ ಇಲ್ಲವೇ ಲೋಕಾನುಭವ ವಿಲ್ಲದ ಮಕ್ಕಳು ಎಂದು ನಿರ್ಲಕ್ಷ ಮಾಡುತ್ತಾರೆ .ಇಂದು ವೈದ್ಯಕೀಯ ಎಂಬುದು  ಎಲ್ಲ ವೃತ್ತಿಗಳಂತೆ ,ಒಂದು ವೃತ್ತಿ ಮಾತ್ರ .
'ವೈದ್ಯೋ ನಾರಯಣೋ  ಹರಿ' ಎಂದು ಈಗಿನ ರೋಗಿಗಳು ಭಾವಿಸುವುದಿಲ್ಲ .ವೈದ್ಯರು ಸಮಾಜ ಸೇವೆಗೆ ಮಾತ್ರ ಚಿಕಿಸ್ಥೆ ನೀಡುವುದಿಲ್ಲ .ಪರಸ್ಪರ ಅಪನoಬಿಕೆಗಳು ಇದ್ದರೂ ,ಪರಸ್ವರ ಅವಲಂಬನೆ ನಮ್ಮನ್ನು ಹಿಡಿದಿಟ್ಟು ಕೊಂಡಿದೆ .
ಇದಕ್ಕೆ ಒಂದೇ ಕಾರಣ ಇದೇ  ಎಂದು ಹೇಳುವುದಕ್ಕೆ ಕಷ್ಟ ಸಾದ್ಯ .ಇದರಲ್ಲಿ ವೈದ್ಯರೂ ,ರೋಗಿಗಳು ,ಸರ್ಕಾರಗಳು ಮತ್ತು ಉದ್ಯಮಿಗಳು ಸಿಂಹ ಪಾಲು ಕಾರಣರು .
ಪರಸ್ಪರ ಅಪನಂಬಿಕೆ ನಡುವೆ ಸಾಗುತ್ತಿರುವ ನಾವು-ನೀವು ,ಪ್ರೀತಿ -ದ್ವೇಷ ಗಳನ್ನೂ ಒಟ್ಟಿಗೆ ಸಲಹುತ್ತಿದ್ದೇವೆ ..ಯಾವುದನ್ನು ಪ್ರೀತಿಸಬೇಕು ,ಯಾವುದನ್ನೂ ಖಂಡಿಸಬೇಕು ಎಂದು ನಮಗೆ ಸುಲಬದಿ ತಿಳಿಯುವುದಿಲ್ಲ .ಯಾಕೆಂದರೆ ಸರಿತಪ್ಪುಗಳು ನೋಡುವನ ಮನಸ್ತಿತಿಯನ್ನು ಅವಲಂಬಿಸಿರುತ್ತದೆ .ನಮಗೆ ಸರಿ ಎನಿಸಿದ್ದು ,ಬೇರೆಯವರಿಗೆ ತಪ್ಪಿರಬಹುದು .ನಮಗೆ ತಪ್ಪಾಗಿ ಕಂಡಿದ್ದು ,ಸರಿಯಿರಬಹುದು .ಈ ದ್ವಂದ ಗಳು ವೈದ್ಯ ವೃತ್ತಿಗಳಲ್ಲಿ ಹೆಚ್ಚು ಕಾಣುವಂತ ದ್ದು .ಇಲ್ಲಿ ಎರಡು ಮತ್ತು ಎರಡು ಯಾವಾಗಲು ನಾಲ್ಕಗಿರುವುದಕ್ಕೆ ಸಾದ್ಯವಿಲ್ಲ.

ವೈದ್ಯಕೀಯ ವೃತ್ತಿಯನ್ನು ಒಂದು ಉದ್ಯಮವಾಗಿ ಪರಿಗಣಿಸಬಾರದು ,ಸೇವಾ ಮನೂ ಭಾವದಿಂದ ಕೆಲಸ ಮಾಡಬೇಕು ಎಂದು ಹೇಳುವುದು ಸುಲಭ.ಮಠಗಳೇ ಉದ್ಯಮವಾಗಿರು ಈ ಕಾಲದಲ್ಲಿ ,ಬಹಳಷ್ಟು ಬೆವರು ಸುರಿಸಿ ವೈದ್ಯರಾಗುವರನ್ನ, ಸನ್ಯಾಸಿಗಳಂತೆ ಜೀವನ ಮಾಡಲು ನಿರೀಕ್ಷಿಸುವುದು ಸಂಮಂಜಸವಲ್ಲ.ಲೌಕಿಕ  ಕೆಸರಿನ ಜಗತ್ತಿನಲ್ಲಿ ಕಮಲವಾಗಿ ವೈದ್ಯರು ಇರಬಹುದೇ ಎಂಬುದು ಯಕ್ಷ ಪ್ರಶ್ನೆ .ವೈದ್ಯ ರೋಗಿ ಗಳ ನಡುವಿನ ಸಂಬಂದವನ್ನ ಧನಾತ್ಮಕವಾಗಿ ಬೆಳಸದಿದ್ದರೆ ,ಅದು ಮನುಕುಲದ ದೊಡ್ಡ ದುರಂತ ಕಂದಕ ವಾಗುವುದರಲ್ಲಿ  ಸಂಶಯವಿಲ್ಲ  .


                                                                                                               ದಯಾನಂದ ಅಂಕಣ್ಣನದೊಡ್ಡಿ

                                                                     ಸೂಚನೆ
ಕತೆಯ ನೈಜತೆಗಾಗಿ ಕೆಲವೊಂದು ನಿಜ ವ್ಯಕ್ತಿ ಗಳ ಹೆಸರುಗಳನ್ನೂ ಬಳಸಿಕೊಳ್ಳಲಾಗಿದೆ . ಆದರೆ ಈ  ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ .ಈ ಕಾದಂಬರಿಯ ಪಾತ್ರಗಳಿಗೂ ,ನಿಜ ವ್ಯಕ್ತಿಗಳಿಗೂ ಸಾಮ್ಯ ವಿದ್ದರೆ ಅದು ಕಾಕತಾಳಿಯ ಮಾತ್ರ. ಯಾರ ಮನಸ್ಸಿಗೂ ನೋವುಂಟು ಮಾಡುವುದು ಲೇಖಕರ ಉದ್ದೇಶವಲ್ಲ.
                                                                                                                       (ಮುಂದುವರೆಯುವುದು )